Thursday, July 12, 2007

ಬೆಳಕಿನ ವಕ್ರೀಭವನ

ಇರುಳ ಒರೆದು ಉರ್ವಿ ಬೆಳಗಿ
ಸಡಗರದಿ ತೇರನೇರಿ
ಹೊಸತೊಂದು ದಿನದ ಮುದವ
ತಂದ ಬೆಳಕು ಬಾಗುವುದಂತೆ

ಲಕ್ಷ ಲಕ್ಷ ದೂರ ಕ್ಷಣದಲ್ಲೇ ಕ್ರಮಿಸಿ
ಲಕಲಕನೇ ಹೊಳೆಯುತ್ತ ಬರುವ ಬೆಳಕು
ಭುವಿಯ ಪವನ ಸೋಂಕೆ
ಲವಮಾತ್ರ ಬಾಗಿ ಇಳಿವುದಂತೆ

ಅವರವರ ಭಕ್ತಿಭಾವಕ್ಕೆ ತಕ್ಕಂತೆ
ಜಗಜ್ಯೋತಿ ಒಲಿದು ತಾನಾಗೇ ಮಣಿವಂತೆ
ನನ್ನಿಂದಲೇ ಎಲ್ಲ ನಾನೇ ಪರನೆಂಬ
ಜೀವಜ್ಯೋತಿ ಮಹತಿಗೆ ಸೋತು ಒರಗುವಂತೆ

ಗಾಳಿಯಿಂದ ನೀರಿಗಿಳಿವಾಗ ಬಳುಕಿ
ಇಳಿವ ಜಲದ ಮೇಲ್ಮೈಗೆ
ಎಳೆದ ಲಂಬದೆಡೆಗೆ
ವಾಲಿತಂತೆ ಇಳಿದ ಕೋನವಿದ್ದಂತೆ

ಅಷ್ಟೇ ಅಲ್ಲ ನೀರ ಹೊರಮೈಗೆ
ನಿರ್ದಿಷ್ಟ ನೇರ ಸೆಳೆದು ಬಿಟ್ಟ
ಅಂಬಿನಂತೆ ಇಳಿವ ಬೆಳಕು
ಒಂದಿಷ್ಟೂ ಬಾಗದೆ ಹಾಗೆ ಉಳಿವುದಂತೆ

ಅದಕ್ಕೇ ಏನೊ ಸಿರಿ ಲಕ್ಷ್ಮಿಆದಿ
ದಾಸರೆಲ್ಲ ಇದಿರು ನೋಡುವರು
ಮುದ್ದು ವಿಟ್ಠಲನ ಕಟಾಕ್ಷಕ್ಕೆ!
ಇದ್ದೇನೆಂಬುದ ಲೆಕ್ಕಿಸದಂತೆ
ಮದ್ದಾನೆ ಜಲಧಿ ನುಗ್ಗುವಂಥ
ನೋಟಕ್ಕಿಂತ, ಸದ್ಭಕ್ತಿ ಮೆಚ್ಚಿ
ಮಣಿದು ಹೊಳೆವ ಸಚ್ಚಿದಾನಂದ
ಬಿಂಬವಾಗಿ ಚಿದ್ದೇಹದೊಳು
ನೆಲೆನಿಂತು ಕಾಪಿಡುವ
ಕುಡಿನೋಟವನ್ನೇ ಎಂದೂ!