Showing posts with label ಮನನ. Show all posts
Showing posts with label ಮನನ. Show all posts

Sunday, November 18, 2007

ಓಲ್ಡ್ ಮ್ಯಾನ್ ಆಂಡ್ ದಿ ಸೀ

ನಿನ್ನೆ ಅರ್ನೆಸ್ಟ್ ಹೆಮಿಂಗ್ವೆಯ ನೋಬೆಲ್ ವಿಜೇತ ಪುಸ್ತಕ ’ದಿ ಓಲ್ಡ್ ಮ್ಯಾನ್ ಆಂಡ್ ದಿ ಸೀ’ ಓದಿದೆ. ಸುಮಾರು ನೂರ ಹತ್ತು ಪುಟಗಳ ಪುಸ್ತಕ ಅದ್ಭುತವಾದ ರೇಖಾಚಿತ್ರಗಳೊಡನೆ ಕೂಡಿದ್ದು ಕೊನೆಯವರೆಗೂ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಹಿಂದೊಮ್ಮೆ ಕಸ್ತೂರಿಯಲ್ಲಿ ಇದರ ಕನ್ನಡ ಅನುವಾದ ಪ್ರಕಟವಾಗಿತ್ತು. ಅದನ್ನು ಓದಿದ್ದು ಅರ್ಧರ್ಧ ನೆನಪಿದೆ ಎಂದುಕೊಂಡು ಎಷ್ಟೋ ಸಾರಿ ಮೂಲದ ಇಂಗ್ಲೀಷ್ ಪುಸ್ತಕ ಓದುವಬಗ್ಗೆ ಯೋಚಿಸಿರಲಿಲ್ಲ. ನಾನೆಷ್ಟು ತಪ್ಪು ತಿಳಿದುಕೊಂಡಿದ್ದೆ ಎನ್ನುವದು ಮೊದಲ ಕೆಲವು ಪುಟಗಳಲ್ಲೇ ತಿಳಿದು ಹೋಯಿತು.

ಸತತ ೮೪ ದಿನಗಳ ಕಾಲ ದಿನವೂ ಸಮುದ್ರಕ್ಕೆ ಹೋಗಿ ಒಂದೂ ಮೀನಿಲ್ಲದೆ ಬರುತ್ತಿದ್ದ ಸಾಂಟಿಯಾಗೋ ಎನ್ನುವ ಮುದುಕನ ಕತೆ ಇದು. ೮೫ನೇ ದಿನ ಅವನ ಅದೃಷ್ಟ ಪರೀಕ್ಷಿಸುತ್ತದೆ. ಎಂದೂ ಹಿಡಿರದಂತಹ ಮೀನೊಂದು ಅವನ ಗಾಳವನ್ನು ಕಚ್ಚುತ್ತದೆ. ಸಾಮಾನ್ಯ ಮೀನಲ್ಲ ಅದು. ಸರಳವಾಗಿ ಕೈಗೆ ಸಿಗುವದೂ ಅಲ್ಲ. ಮೂರು ದಿನಗಳ ಕಾಲ ಮುದುಕನ ಶಕ್ತಿ, ಯುಕ್ತಿ, ತಾಳ್ಮೆಗಳನ್ನು ಒರೆಗೆ ಹಚ್ಚುತ್ತದೆ. ಕೊನೆಗೆ ಮುದುಕನ ಕೈಯೇ ಮೇಲಾಗುತ್ತದೆ. ಇಷ್ಟಾದರೂ ಮುದುಕನಿಗೆ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂದಂತೆ ಹಿಡಿದ ೧೫೦೦ ಪೌಂಡಿನ ಮೀನು ಶಾರ್ಕುಗಾಳ ಬಾಯಿಗೆ ಆಹಾರವಾಗಿ ಬರೀ ಮೀನಿನ ತಲೆ ಮತ್ತು ಅಸ್ಥಿಪಂಜರ ಉಳಿಯುತ್ತದೆ. ಮುದುಕ ಸರಳವಾಗಿ ಸೋಲೊಪ್ಪುವಂಥವನಲ್ಲ. ಮೂರು ನಾಲ್ಕು ಶಾರ್ಕುಗಳನ್ನೂ ಕೊಲ್ಲುತ್ತಾನೆ ಆದರೆ ಪ್ರತಿಯೊಂದು ಶಾರ್ಕ್ ಅಷ್ಟಿಷ್ಟು ತಿಂದು ಹಾಕುತ್ತದೆ.

ಸರಳವಾದ ಕಥೆ ಓದುತ್ತ ಹೋದಂತೆ ಹಿಡಿದಿಟ್ಟುಕೊಳ್ಳುತ್ತದೆ. ಕಥಾನಾಯಕ ಸಾಂಟಿಯಾಗೋನ ಕೌಶಲ್ಯವನ್ನು ಉತ್ಪ್ರೇಕ್ಷಿಸಲು ಹಲವು ಸಂದರ್ಭಗಳಿದ್ದರೂ ಎಲ್ಲೆಡೆ ಕಾಣುವದು ತಣ್ಣನೆಯ matter of fact ನಿರೂಪಣೆ. ಹಾಗೆ ಹೇಳದೇ ಹೋಗಿದ್ದರೆ ಮುದುಕನ ಸಾಮರ್ಥ್ಯಕ್ಕೆ ಅವಮಾನವಾಗುತ್ತಿತ್ತು ಎನಿಸುತ್ತದೆ. ಸತತ ಮೂರು ದಿನಗಳ ಕಾಲ ಗಾಳದ ಒಂದು ತುದಿ ಮೀನಿನ ಬಾಯಲ್ಲಿ ಮತ್ತು ಇನ್ನೊಂದು ತುದಿ ಮುದುಕನ ಕೈಯಲ್ಲಿ. ಎಲ್ಲೂ ನಿಲ್ಲದೆ ಎಳೆದುಕೊಂಡು ಹೋಗುವ ಮೀನಿಗೆ ಮುದುಕ ಹೇಳುವ ಮಾತುಗಳಲ್ಲಿ ಮುದುಕನ ತಲೆ ಮೀನಿನ ಜಾಡು ಹಿಡಿಯುವದರಲ್ಲೇ ನೆರೆತದ್ದರ ಅರಿವಾಗುತ್ತದೆ.

ನನಗೆ ಬಹಳ ಇಷ್ಟವಾದದ್ದು ಮುದುಕ ಮೀನಿನ ಜೊತೆಗೆ (ತನಗೆ ತಾನೇ ಕೂಡ) ಆಡುವ ಮಾತುಗಳು.

ಯಾವುದೇ ತರಹದ ಬಳಲುವಿಕೆಯೇ ಇಲ್ಲದಂತೆ ತನ್ನನ್ನೂ, ತನ್ನ ಪುಟ್ಟ ಹಡಗನ್ನೂ ಆ ಮೀನು ಸತತವಾಗಿ ಎಳೆದುಕೊಂಡು ಹೋಗುತ್ತಿರುವಾಗ ತನಗೇ ತಾನೆ ಹುರಿದುಂಬಿಸಿಕೊಳ್ಳುತ್ತಾನೆ. "ಆ ಹುಡುಗನಿಗೆ ನಾನೊಬ್ಬ ವಿಚಿತ್ರ ಮುದುಕ ಅಂತ ಹೇಳಿದೆ. ಈಗ ಅದನ್ನು ಸಾಧಿಸಿ ತೋರಿಸುವ ಕಾಲ ಬಂದಿದೆ. ಹಿಂದೆ ಎಷ್ಟು ಬಾರಿ ತೋರಿಸಿದ್ದೇನೆ ಎನ್ನುವದರಿಂದೇನೂ ಉಪಯೋಗವಿಲ್ಲ. ಪ್ರತಿಬಾರಿಯೂ ಹೊಸದಾಗಿ ಸಾಧಿಸಬೇಕು."

ಮೊದಲ ಶಾರ್ಕನ್ನು ಕೊಂದಾದ ಮೇಲೆ ಮುದುಕನಿಗೆ ಶಾರ್ಕ್ ತಿಂದು ಹರಿದಿರುವ ಮೀನಿನ ದೇಹ ನೋಡಿದಾಗ ಏನೋ ಪಾಪಪ್ರಜ್ಞೆ. ಅಷ್ಟರಲ್ಲೇ ಇನ್ನೂ ಪೂರ್ತಿ ಇದ್ದ ಮುಂಭಾಗ ನೋಡಿದಾಗ ಮತ್ತೆ ಹುರುಪು ಬರುತ್ತದೆ. ತನಗೆ ತಾನೇ ಹೇಳಿಕೊಳ್ಳುತ್ತಾನೆ, " ನಂಬಿಕೆಯನ್ನು ಪೂರ್ತಿ ಕಳೆದುಕೊಳ್ಳುವದು ಮೂರ್ಖತನ! ಅಲ್ಲದೆ ಅದು ಪಾಪವೂ ಹೌದು ಎಂದುಕೊಳ್ಳುತ್ತೇನೆ." ಪಾಪ-ಪುಣ್ಯಗಳ ಸೆಳವಿಗೆ ಅರಿವಿಲ್ಲದಂತೆಯೆ ಕಾಲಿಟ್ಟು ಮರುಕ್ಷಣ ಅಂದುಕೊಳ್ಳುತ್ತಾನೆ, "ಪಾಪಗಳ ಬಗ್ಗೆ ಯೋಚಿಸದಿರು ಈಗ. ಈಗಾಗಲೆ ಸಾಕಷ್ಟು ತೊಂದರೆಗಳಿಗೆ ಸಿಲುಕಿದ್ದೇನೆ. ಅದೂ ಅಲ್ಲದೆ ನಾನು ಪಾಪ ಪುಣ್ಯಗಳಲ್ಲಿ ನಂಬಿಕೆ ಇಟ್ಟಿದ್ದೇನೋ ಇಲ್ಲವೋ ಎನ್ನುವದು ನನಗೇ ಗೊತ್ತಿಲ್ಲ! ನಾನು ಈ ಮೀನನ್ನು ಕೊಂದಿದ್ದು ಇದರಿಂದ ಬಹಳಷ್ಟು ಜನರ ಹೊಟ್ಟೆ ತುಂಬುತ್ತದೆ ಎಂದು. ಒಂದು ಬಾರಿ ಕೊಂದಾದ ಮೇಲೆ ಪಾಪ-ಪುಣ್ಯಗಳನ್ನು ಮೀರಿ ಬಹಳ ಹಾದಿ ಬಂದಾಗಿದೆ!" ಯಾಕೆ ಇದೆಲ್ಲ ಯೋಚನೆ ಮಾಡಬೇಕು ಸುಮ್ಮನೆ ಕುಳಿತರಾಗದೇ ಎಂದುಕೊಳ್ಳುತ್ತಾನೆ. ಆದರೆ ಮತ್ತು ಸ್ವಲ್ಪ ಹೊತ್ತಿನಲ್ಲೇ ಹೇಳಿಕೊಳ್ಳುತ್ತಾನೆ; "ನೀನೇನೂ ಕೇವಲ ಊಟಕ್ಕಾಗಿ ಈ ಮೀನನ್ನು ಕೊಂದಿಲ್ಲ. ನಿನ್ನ ಆತ್ಮಗೌರವಕ್ಕಾಗೂ ಕೊಂದಿದ್ದೀಯ. ನೀನೊಬ್ಬ ಮೀನುಗಾರ ನೆನಪಿರಲಿ. ಅದು ಬದುಕಿದ್ದಾಗಲೂ ನೀನದನ್ನು ಪ್ರೀತಿಸಿದ್ದೆ. ಈಗ ಅದು ಸತ್ತಾಗಲೂ ನೀನದನ್ನು ಪ್ರೀತಿಸುತ್ತಿದ್ದೀಯ. ನೀನದನ್ನು ಪ್ರೀತಿಸಿದ್ದರೆ ಅದನ್ನು ಕೊಂದದ್ದೇನೂ ಪಾಪವಲ್ಲ. ಅಥವಾ ದೊಡ್ಡ ಪಾಪವೇ?" ಹೀಗೆ ಸರಿ-ತಪ್ಪುಗಳ, ಪುಣ್ಯ-ಪಾಪಗಳ ನಡುವಿನ ಮಸುಕು ಗೆರೆಗಳ ಅತ್ತಿತ್ತ ಓಲಾಡುವ ವಿಚಾರ ಸರಣಿ ಜೀವನದ ವೈರುಧ್ಯಗಳ ಪ್ರತೀಕದಂತಿದೆ!

ಮೀನನ್ನು ತಿನ್ನದ, ಮೀನು ಹಿಡಿಯುವವರ ಪಾಡಿನ ಅರಿವು ಅಷ್ಟಿರದ ನನಗೆ ಈ ಪುಸ್ತಕ ಹೊಸದೊಂದು ಲೋಕವನ್ನು ತೆರೆದಿಟ್ಟಿದೆ!

Tuesday, June 12, 2007

ಪೀಟರ್ ಡ್ರಕರ್ ಮತ್ತು ಕುರು ಭುಂಕ್ಷ್ವಚ

ಪೀಟರ್ ಡ್ರಕರ್ ೬೦ ವರ್ಷಗಳಲ್ಲಿ ಬರೆದ ಲೇಖನಗಳಲ್ಲಿ ಆಯ್ದ ಕೆಲವನ್ನು "The Essential Drucker" ಎನ್ನುವ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ಕೆಲವು ದಿವಸಗಳ ಹಿಂದೆ "Know your strengths and your values" ಎನ್ನುವ ಒಂದು ಭಾಗ ಓದುತ್ತಿದ್ದೆ. ಅದರಲ್ಲಿ ಪ್ರತಿಯೊಬ್ಬನೂ ಹೇಗೆ ತನ್ನ ಸಾಮರ್ಥ್ಯವನ್ನು ಮತ್ತು ತನಗೆ ಯಾವ ಕೆಲಸ ಸರಿಹೊಂದುತ್ತದೆ ಎನ್ನುವುದನ್ನು ಕಂಡುಕೊಳ್ಳಬಹುದು ಎಂದು ಹೇಳುತ್ತಾನೆ. ಅದನ್ನೇ ಮುಂದುವರೆಸುತ್ತ, ಸಾಮರ್ಥ್ಯದ ಅರಿವಾದ ಮೇಲೆ ಹೇಗೆ ತನ್ನ ಪರಿಣತಿಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವುದನ್ನು ಹೀಗೆ ಹೇಳುತ್ತಾನೆ. "ಪ್ರತಿಯೊಬ್ಬನೂ ತಾನು ಯಾವ ಕೆಲಸ ಮಾಡುವುದರಲ್ಲಿ ನಿಷ್ಣಾತನೋ ಆ ಕೆಲಸದಲ್ಲಿ, ಅದಕ್ಕೆ ಸಂಬಂಧಪಟ್ಟ ವಿಭಾಗಗಳಲ್ಲಿ ತನ್ನ ಪರಿಣಿತಿಯನ್ನು ಹೆಚ್ಚಿಸಿಕೊಳ್ಳಲು ಶ್ರಮಿಸಬೇಕೆ ಹೊರತು ತನಗೆ ಏನೇನೂ ಬಾರದ (ಅಥವ ಅತಿ ಕಡಿಮೆ ಕಾಂಪೀಟೆನ್ಸಿ ಇರುವ) ಕೆಲಸದಲ್ಲಿ ಕನಿಷ್ಠ ಮಟ್ಟದ ಸಾಧನೆ ಮಾಡಲು ಅಲ್ಲ. ನಮಗೆ ಯಾವ ಕೆಲಸದಲ್ಲಿ ಸಾಮರ್ಥ್ಯವಿದಯೋ ಅದರಲ್ಲಿ ಮತ್ತಷ್ಟು ಪರಿಣಿತರಾಗಲು ಎಷ್ಟು ಸಮಯ, ಶ್ರಮ ವ್ಯಯಿಸಬೇಕೋ ಅದಕ್ಕೆ ಎಷ್ಟೋ ಪಟ್ಟು ಹೆಚ್ಚಿನ ಶ್ರಮಪಟ್ಟರೂ ನಮಗೆ ಹೊಂದದ ಕೆಲಸದಲ್ಲಿ ನಾವು ಕೇವಲ ಕನಿಷ್ಟ ಪರಿಣತಿ ಪಡೆಯಬಹುದಷ್ಟೆ."

ಅದರ ನಂತರ ಹೇಳುವದು ನಮ್ಮ ಮೌಲ್ಯಗಳ ಬಗ್ಗೆ. ಪ್ರತಿಯೊಬ್ಬ ವ್ಯಕ್ತಿಯೂ ತಾನು ಮಾಡುವ ಕೆಲಸ ತನ್ನ ಜೀವನ ಮೌಲ್ಯಗಳಿಗೆ ಹೊಂದುತ್ತದೆಯೇ ಇಲ್ಲವೇ ಎನ್ನುವದನ್ನು ಸದಾ ಗಮನಿಸಬೇಕು. ವ್ಯಕ್ತಿಯ ಸಾಮರ್ಥ್ಯ ಮತ್ತು ಅವನ ಕಾರ್ಯಕ್ಷಮತೆಗಳು ಒಂದನ್ನೊಂದು ಹೊಂದಿಕೊಂಡಿರುತ್ತವೆ. ಆದರೆ ಅದೇ ವ್ಯಕ್ತಿಯ ಮೌಲ್ಯ ಮತ್ತು ಕಾರ್ಯಕ್ಷಮತೆಗಳು ಹೊಂದಿಕೊಂಡಿರಬೇಕೆಂತಿಲ್ಲ. ಮೌಲ್ಯಗಳಿಗೂ ಮಾಡುವ ಕೆಲಸಕ್ಕೂ ತಿಕ್ಕಾಟ ಬಂದರೆ ನಾವು ಆ ಕೆಲಸದಲ್ಲಿ ಎಷ್ಟೇ ನಿಷ್ಣಾತರಾಗಿದ್ದರೂ ನಮ್ಮ ಮೌಲ್ಯಗಳಿಗನುಗುಣವಾಗಿರುವ ಬೇರೆ ಕೆಲಸವನ್ನು ನೋಡಬೇಕೆ ಹೊರತು ಇದ್ದ ಕೆಲಸದಲ್ಲಿಯೇ ಇರುವುದರಲ್ಲಿ ಅರ್ಥವಿಲ್ಲ. ಯಾವ ಕೆಲಸದಲ್ಲಿ ಜೀವನದ ಹೆಚ್ಚಿನಂಶವನ್ನು ಕಳೆಯುತ್ತೇವೋ ಅದಕ್ಕೂ ನಮ್ಮ ಮೌಲ್ಯಗಳಿಗೂ ಸಾಮರಸ್ಯವಿರದಿದ್ದರೆ ಜಯ ಮೌಲ್ಯಗಳಿಗೆ ಸಿಗಬೇಕೇ ಹೊರತು ಆ ಕೆಲಸದಲ್ಲಿನ ನಮ್ಮ ಪರಿಣಿತಿಗಲ್ಲ.


ಇಷ್ಟನ್ನು ಓದಿ ಅದನ್ನೇ ಮೆಲಕು ಹಾಕುತ್ತಿದ್ದಾಗ ಮಧ್ವಾಚಾರ್ಯರ ದ್ವಾದಶ ಸ್ತೋತ್ರದ ಮೂರನೇ ಸ್ತೋತ್ರ 'ಕುರು ಭುಂಕ್ಷ್ವಚ ಕರ್ಮ ನಿಜಂ ನಿಯತಂ ಹರಿಪಾದ ವಿನಮೃತಯಾ ಸತತಮ್' ಬಗ್ಗೆ ಬನ್ನಂಜೆ ಅವರ ಉಪನ್ಯಾಸವನ್ನು ಕೇಳುತ್ತಿದ್ದೆ. ಎರಡು ವಿಚಾರಧಾರೆಗಳಲ್ಲಿ ಎಷ್ಟೊಂದು ಸಾಮ್ಯ ವಿದೆಯಲ್ಲ ಅನಿಸಿತು. ಒಬ್ಬ ಪಾಶ್ಚಾತ್ಯ ದೇಶದ ೨೦ನೇ ಶತಮಾನದ ಚಿಂತಕ. ಇನ್ನೊಬ್ಬರು ಪೌರ್ವಾತ್ಯದ ೧೧-೧೨ನೇ ಶತಮಾನದ ಧರ್ಮಗುರು. ಮಧ್ವಾಚಾರ್ಯರ ಈ ಸಂದೇಶ ಹೇಳುವುದು ಈಶಾವಾಸ್ಯ ಉಪನಿಷತ್ತಿನ ಸಂದೇಶ. "ಮಾಡು, ಮಾಡಿದ್ದರ ಫಲವನ್ನು ಅನುಭವಿಸು. ಮಾಡುವಾಗ ನಿನಗೆ ನಿಜವಾಗಿ, ಸಹಜವಾಗಿ ಒಲಿದ ಕರ್ಮವನ್ನು ಮಾಡು. ಅದೇ ಸಮಯದಲ್ಲಿ ಸಹಜ ಎಂದು ಏನೇನೋ ಮಾಡುವುದಲ್ಲ, ನಿಯತವಾದದ್ದನ್ನ ಮಾಡು. ನಿಜವಾದದ್ದನ್ನ, ನಿಯತವಾದದ್ದನ್ನ ಮಾಡುವಾಗ ಹರಿಪಾದದಲ್ಲಿ ವಿನಮೃತೆಯಿಂದ ಮಾಡು". ಅದೇ ಶ್ಲೋಕದಲ್ಲಿ ಮುಂದುವರೆದು ಹೇಳುತ್ತಾರೆ,
" ತದಲಂ ಬಹುಲೋಕ ವಿಚಿಂತನಯಾ ಪ್ರವಣಂ ಕುರು ಮಾನಸಮೀಶ ಪದೆ " (ಲೋಕದ ಸುದ್ದಿ ಎಂದು ನಿನಗೆ ಸಂಬಂಧಪಡದಿದ್ದನ್ನೆಲ್ಲ ವಿಚಾರ ಮಾಡ್ತಾ ಸಮಯ ಹಾಳು ಮಾಡಬೇಡ. ಈಶ ಪದದಲ್ಲಿ ಮನಸ್ಸನ್ನಿಟ್ಟು ನಿನ್ನ ಕೆಲಸವನ್ನು ಮಾಡು).

Sunday, June 10, 2007

ಎಂದು ಬರುವುದು ನನ್ನ ಸೇವೆಯ ಪಾಳಿ

ಬಹಳ ಹಿಂದೆ ನನ್ನ ಮೊದಲ ಬ್ಲಾಗ್ ಎಂಟ್ರಿ ಎಂದು ಬರೆದದ್ದು. ಈಗ ಹಾಕುತ್ತಿದ್ದೇನೆ.
ಹಲವು ದಿನಗಳಿಂದ ಇದ್ದ ಬ್ಲಾಗಿಸುವ ಆಸೆಗೆ ಇವತ್ತು ಶ್ರೀಕಾರ ಹಾಕುತ್ತಿದ್ದೇನೆ. ಕಳೆದ ಒಂದು ವಾರದಲ್ಲಿ ವಿದ್ಯಾಭೂಷಣರ ಸಂಗೀತರಸವನ್ನು ಎರಡು ಬಾರಿ ಸವಿಯುವ ಸುಯೋಗ ದೊರಕಿತ್ತು. ಅದರಿಂದ ಆಯ್ದ ಕೆಲ ಘಳಿಗೆಗಳೆ ನನ್ನ ಮೊದಲ ಪುಟ.

ನಮ್ಮಮ್ಮ ಶಾರದೆ, ರೋಗಹರನೆ ಕೃಪಾಸಾಗರ, ಪಿಳ್ಳಂಗೋವಿಯ ಚೆಲ್ವ ಕೃಷ್ಣನೆ ಮುಂತಾದ ದಾಸರ ಪದಗಳನ್ನು ಭಾವಪೂರ್ಣರಾಗಿ ಹಾಡಿದ್ದ ವಿದ್ಯಾಭೂಷಣರ ಹಾಡುಗಾರಿಕೆ ಸೊಗಸಾದದ್ದು. ಅವರ ಈ ಬಾರಿಯ ಅಮೇರಿಕ ಪ್ರವಾಸ ಸಮಯದಲ್ಲಿ ಸ್ಯಾನೆ ಹೋಸೆಗೆ ಬಂದಿದ್ದರು. ನವೆಂಬರ್ ನಾಲ್ಕರಂದು ಒಂದು ಕಾರ್ಯಕ್ರಮ ನಂತರ ದಿನಕ್ಕೊಂದರಂತೆ ಸಹೃದಯರ ಮನೆಗಳಲ್ಲಿ ಸಂಗೀತ ರಸಗವಳ ಮುಂದಿನ ನಾಲ್ಕು ದಿನಗಳ ಕಾಲ ನಡೆಯಿತು. ಕಾರ್ಯಕ್ರಮಗಳ ವರದಿ ನನ್ನ ಈ ಪುಟದ ಉದ್ದೇಶವಲ್ಲ. ಬದಲಿಗೆ ನಾನಲ್ಲಿ ಮೊದಲ ಬಾರಿಗೆ ಕೇಳಿದ ಕೆಲವು ಪದಗಳ ಸ್ವಾರಸ್ಯವನ್ನು ಉಲ್ಲೇಖಿಸುವುದು ಉದ್ದೇಶ.

೧. ಮೊದಲನೇಯದ್ದು, ನವೆಂಬರ್ ನಾಲ್ಕರ ಸಭೆಯಲ್ಲಿ ಹಾಡುತ್ತ ಮೊದಲಿಗೆ "ಸುಲಭದ ಮುಕುತಿಗೆ ಸುಲಭನಾದ ಹರಿ" ಎಂಬ ಪದವನ್ನು ಹಾಡಿ ನಂತರ "ಸುಮ್ಮನೆ ದೊರಕೋದೆ ಮುಕ್ತಿ" ಎಂಬ ಗೋಪಾಲದಾಸರ ಪದ ಎತ್ತಿಕೊಂಡಾಗ ಆ ಕ್ಷಣದಲ್ಲಿ ನನ್ನ ಮುಖದಲ್ಲೊಂದು ಕಿರುನಗೆ ಹಾದು ಹೋಯಿತು. ಸುಲಭವಾಗಿ ಮುಕ್ತಿ ಸಿಗಲು ಅತಿ ಸುಲಭನಾದ ಹರಿ ಕಿರ್ತನೆ ಮಾಡಿ ಎಂಬುವುದು ಮೊದಲ ಸಂದೇಶವಾದರೆ, ಎರಡನೆಯದು ಆ ಹರಿ ಕಾರುಣ್ಯಕ್ಕೆ ಇನ್ನೇನೇನಿರಬೇಕು ಎಂದು ನಿರೂಪಿಸುವ ಪದ! ಕಾರ್ಯಕ್ರಮ ಮುಗಿದ ನಂತರ ಶ್ರೀವಿದ್ಯಾಭೂಷಣರನ್ನು ಇದರ ಬಗ್ಗೆ ಕೇಳಿದಾಗ ಅವರು ಹೇಳಿದ್ದು, "ಹೌದು. ಮತ್ತೆ ಎರಡನ್ನೂ ಸರಿತೂಗಿಸಬೇಕಲ್ಲ!".

೨. ಬನ್ನಂಜೆಯವರು ಬರೆದ ಹಾಡು, ಓ ಪಾಜಕದ ಗಿಣಿಯೇ. ಈ ಹಾಡನ್ನು ನಾನು ಮುಂಚೆ ಕೇಳಿರಲಿಲ್ಲ. ಮೊದಲ ಸಲ ಕೇಳಿದಾಗಲೇ ಮನ ಸೂರೆಗೊಂಡಿತು

ಓ ಪಾಜಕದ ಗಿಣಿಯೆ
ಸೋಜಿಗದ ಗಣಿಯೇ

....
ನೀನೇರಿದೆತ್ತರವ ಕಂಡವರು ಯಾರು?
ನಮಗೂ ತೋರಿಸಯ್ಯ ಆ ಬೆಳಕಿನೂರು
....
ಕೈಮುಗಿಯುವೆನು ಕ್ಷಮೆಯನ್ನು ಕೇಳಿ
ಬೀಜಾಕ್ಷರವನ್ನು ಬರೆಯಯ್ಯ ಎದೆಯನ್ನು ಸೀಳಿ
ಎಂದು ಬರುವುದು ನನ್ನ ಸೇವೆಯ ಪಾಳಿ
ತಲೆಯ ಮೇಲಿರಿಸು ನಿನ್ನ ಪದಧೂಳಿ

ಅಮೋಘ ನುಡಿಗಳು. ಭಕ್ತಿಯ ಮೊರೆ ಹೃದಯ ಕರಗುವಂತೆ ಮೂಡಿ ಬಂದಿದೆ. ನೀನೇರಿದೆತ್ತರವ ಕಂಡವರು ಯಾರು ಎಂಬಲ್ಲಿ ಆನಂದತೀರ್ಥರ ಅಪಾರ ಸಾಧನೆಯನ್ನು ಹೇಳಿದರೆ, ನಮಗೂ ತೋರಯ್ಯ ಆ ಬೆಳಕಿನೂರು ಎಂಬಲ್ಲಿ, ಗುರುವಿನಲ್ಲಿ ಶಿಷ್ಯನ ವಿನಮ್ರ ಪ್ರಾರ್ಥನೆಯಿದೆ. ಎದೆ ಸೀಳಿ ಬೀಜಾಕ್ಷರವನ್ನು ಬರೆ ಎಂಬ ಕಳಕಳಿಯ ಪ್ರಾರ್ಥನೆ ಮತ್ತು ಅದರ ಜೊತೆಯಲ್ಲೇ ಬರುವ ಎಂದು ಬರುವುದು ನನ್ನ ಸೇವೆಯ ಪಾಳಿ ಎಂಬಲ್ಲಿ ನಿರಂತರ ಹರಿಪಾದಸೇವೆಯೆಡೆ ನನ್ನ ಮನ ಹರಿಯುವದೆಂದು, ಅದರಲ್ಲೇ ನಿರತನಾಗುವುದೆಂದು ಎಂಬ ಭಕ್ತಿಪೂರಿತ ಧ್ವನಿ ಸೆರೆಹಿಡಿಯುತ್ತದೆ. ನನ್ನ ತಲೆಯ ಮೇಲಿರಿಸು ನಿನ್ನ ಪದಧೂಳಿ ಎಂದು ಮತ್ತೆ ಪ್ರಾರ್ಥಿಸುವುದು ಆ "ಅತಿಗುಣಗುರುತಮ ಶ್ರೀಮದಾನಂದ ತೀರ್ಥ" ರ ಪಾದಧೂಳಿ. ಅದೆಂಥ ಧೂಳಿಯೆಂದು ತಿಳಿಯಬೇಕಾದರೆ ತ್ರಿವಿಕ್ರಮ ಪಂಡಿತಾಚಾರ್ಯರನ್ನೇ ಕೇಳಬೇಕು ("ತ್ರೈಲೋಕ್ಯಾಚಾರ್ಯ ಪಾದೋಜ್ವಲ ಜಲ ಜಲಿತಾ ಪಾಂಸುರಸ್ಮಾನ್ ಪುನಂತು").

ಪಾಜಕದ ಗಿಣಿಯೇ - ಶುಭನುಡಿಯೇ ಶಕುನ ಹಕ್ಕಿ ಎಂಬಂತೆ ಈ ಆನಂದತೀರ್ಥರೆಂಬ ಗಿಣಿ ನುಡಿಯುವದು ಹರಿನಾಮವೊಂದೇ ಅಲ್ಲವೇ?
ಸೋಜಿಗದ ಗಣಿಯೆ - ಮತ್ತೆ ಮತ್ತೆ ಓದಿದಂತೆ, ಸಂಪರ್ಕ ಬಂದಂತೆ ಆನಂದತೀರ್ಥರ ತತ್ವ ನಮಗೂ ಆನಂದದಾಯಿಯಷ್ಟೇ ಅಲ್ಲದೇ, ಹಲವು ಸೋಜಿಗಗಳ ಗಣಿಯೇ ಆಗಿದೆ.

೩. ಒಂದು ಉಗಾಭೋಗ

ಹ್ಯಾಂಗೆ ಬರೆದಿತ್ತು ಪ್ರಾಚೀನದಲ್ಲಿ
ಹಾಂಗೆ ಇರಬೇಕು ಸಂಸಾರದಲ್ಲಿ

ಪಕ್ಷಿ ಹಾರಿ ಬಂದು ಅಂಗಳದಿ ಕುಳಿತಂತೆ
ಮತ್ತೆ ಆ ಕ್ಷಣದಿ ಹಾರಿ ಹೋದಂತೆ

...

ದಾರಿಗಾರನು ವಸತಿ ಕಂಡಂತೆ
ಹೊತ್ತಾರೆದ್ದು ಹೊರಟು ಹೋದಂತೆ

....

ಈ ಸಂಸಾರದಲ್ಲಿ ಹೇಗೆ ಇರಬೇಕು ಎಂಬ ಈ ಉಗಾಭೋಗ ಓದಿದಂತೆಲ್ಲ ಹೊಸ ಅರ್ಥ ಹೊಮ್ಮಿಸುತ್ತದೆ. ಕೇಳಿದೊಡನೆ ಅತಿ ಸುಲಭವೆಂದೆನಿಸಿದರೂ ಹಿಂದೆಯೇ ಹತ್ತು ಹಲವು ಪ್ರಶ್ನೇಗಳೆಳುತ್ತವೆ.
ಇಲ್ಲಿ ಹೇಳುತ್ತಿರುವುದಾದರೂ ಏನನ್ನು? ಪಕ್ಷಿಯೊಂದು ಹೀಗೆ ಹಾರಿ ಬಂದು ಅಂಗಳಕ್ಕಿಳಿದು ಹಾಗೇ ಕೆಲ ಕ್ಷಣಗಳಲ್ಲಿ ಮತ್ತೆ ಹಾರಿ ಹೋದಂತೆ ಈ ಸಂಸಾರದಲ್ಲಿ ಇರಬೇಕೆ? ಅಂದರೆ ಬೇರೇನನ್ನೂ ಮಾಡುವ ಅವಶ್ಯಕತೆಯಿಲ್ಲವೆ? ಹಾಗಾದರೆ ಮನುಷ್ಯನ ಬದುಕೂ ಪಕ್ಶಿಯ ಆ ಒಂದು ಏನೇನೂ ಮಹತ್ತರವಲ್ಲದ ಹಾರಾಟದಂತೆಯೇ? ಅಲ್ಲ ಎನ್ನುತ್ತದೆ ಹಾಡು. ಈ ಸಂಸಾರಕ್ಕೆ ಬಂದು ಹೋಗುವಾಗಿನ ಮನಃಸ್ಥಿತಿ ಮಾತ್ರ ಹಕ್ಕಿ ಬಂದು ಕುಳಿತು ಹಾರಿಹೋದಂತೆ. ಆ ಹಕ್ಕಿಯೇನು ಸುಮ್ಮನೇ ಬಂದಿತ್ತೆ? ಎಲ್ಲೋ ಆಹಾರ ಕಂಡಿದೆ ಅದಕ್ಕೆ, ಕುಳಿತು ಅಲ್ಲಲ್ಲಿ ಸಿಕ್ಕ ಆಹಾರವ ಹೆಕ್ಕಿ ಕೆಲಸವಾದೊಡನೆ ಬಂದಿದ್ದ ಕುರುಹೂ ಇಲ್ಲದಂತೆ ಹಾರಿ ಹೋಗುವಂತೆ ನಮ್ಮ ಸಂಸಾರದ ಬರುಹೊಗುವುದಿರಬೇಕು ಎಂದೇ ಇರಬೇಕು ಇದರ ಅಂತರ್ಯ. ದಾರಿಗಾರನು ವಸತಿ ಕಂಡಂತೆ, ಹೊತ್ತಾರೆದ್ದು ಹೊರಟು ಹೋದಂತೆ ಎಂಬಲ್ಲಿಯೂ ಅದೇ ಧ್ವನಿ. ಹರಿಯಿತ್ತ ಸಾಧನ ಶರೀರದ ಹುಟ್ಟು ಸಾವುಗಳಿಗೆ ಹೆದರುವ ಅವಶ್ಯಕತೆಯಿಲ್ಲ ಅಲ್ಲವೆ?