Sunday, January 20, 2008

ಅಶ್ವತ್ಥ



ಎಲ್ಲಿ ನೋಡಿದರಲ್ಲಿ ಜನಜಂಗುಳಿ
ಕಾರು ಇತ್ಯಾದಿಗಳ ಸಾಲು
ಗುಂಪಿನಲ್ಲಿ ನಾನೂ
ಹೊರಟಿರುವುದೆಲ್ಲಿಗೆ?
ತಲುಪುವದೆಲ್ಲಿಗೆ?

ಮತ್ತೊಂದು ಮುಂಜಾವು
ಮತ್ತದೇ ಧಾವಂತ
ಕಾಣದ ನಾಳೆಗಳ ತುಡಿತ
ಇಮ್ಮೀಡಿಯೆಟ್ಟುಗಳ ಕುಣಿತ
ಅಹಸ್ಸಂವತ್ಸರನ ಆಟ

ನೆಟ್ಟ ಕನಸುಗಳ ಚಿಂತೆ
ಕೂಡಿಟ್ಟ ಗಂಟುಗಳ ನಂಟು
ಕಷ್ಟವೆಂದು ನಾಳೆಗಳಿಗಿಟ್ಟ ದಾರಿ
ಕೈ ಬಿಟ್ಟ ಆಶೆಗಳ ಕಥೆ, ವ್ಯಥೆ
ದೂರದಲ್ಲೆಲ್ಲೋ ಸದ್ದು, ಅಸ್ಪಷ್ಟ
ಏನದು? ಕಾಲನ ತಮಟೆ?

ಹೂತಿಟ್ಟ ಪದರುಗಳ ಸೀಳಿ
ತತ್ಕ್ಷಣ ಆಲವಾಗಿ, ಅರಳೆಯಾಗಿ
ಕಣಕಣವ ತುಂಬಿ
ಬದುಕೆಲ್ಲ ಬೆದಕಿ
ಅಸ್ತಿತ್ವವನೆ ಕೆಣಕುವ ಪ್ರಶ್ನೆ;
ಧುತ್ತನೆ ಎದುರಾಯ್ತೆ ಇಂದು

ಗೊತ್ತಿದ್ದು ಮರೆತ ಯಕ್ಷಪ್ರಶ್ನೆ
ಮತ್ತೆ ಮತ್ತೆ ನೆನಪಾಗಿ ಕಾಡಿ,
ಇಂದು ನಾಳೆಗಳ ಸಾರ್ಥಕತೆ
ದ್ವಂದ್ವಗಳಲ್ಲಿ ಮುಳುಗಿ
ಬರಿ ಪ್ರಶ್ನೆಗಳೆ ಉಳಿದಾಗ
ಕರುಣಿಸೋ ಕೃಷ್ಣ ಗೀತಾಮೃತ
ಕಿತ್ತಿಬಿಡಬೇಕು ಈ ಅಶ್ವತ್ಥ


(ಭಗವದ್ಗೀತೆ: ಅಧ್ಯಾಯ ೧೫ರ ಒಂದು ಶ್ಲೋಕ:
’ಅಶ್ವತ್ಥಮೇನಂ ಸುವಿರೂಢಮೂಲಂ
ಅಸಂಗ ಶಸ್ತ್ರೇಣ ಧೃಢೇನ ಛಿತ್ವಾ’)

(೨೦೦೭ರ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ವಾರ್ಷಿಕ ಸಂಚಿಕೆ, ಸ್ವರ್ಣಸೇತುವಿನಲ್ಲಿ ಪ್ರಕಟವಾದದ್ದು)